About Me

My photo
contact: off-2674 mob-9538231750

Monday, May 31, 2010

* ಪೂರ್ಣಚಂದ್ರ ತೇಜಸ್ವಿ * (೧೯೩೮-೨೦೦೭) .



1938 ಸೆಪ್ಟೆಂಬರ್ 8 ರಂದು ಕುಪ್ಪಳ್ಳಿಯಲ್ಲಿ ರಾಷ್ಟ್ರಕವಿ ಕುವೆಂಪು - ಹೇಮಾವತಿಯವರ ಮಗನಾಗಿ ಪೂಚಂತೇ ರವರು ಜನಿಸಿದರು.ಮೈಸೂರಿನ ಒಂಟಿಕೊಪ್ಪಲಿನ ಶಾಲೆಯಲ್ಲಿ ಪ್ರಾಥಮಿಕ,ಮಾಧ್ಯಮಿಕ ಶಿಕ್ಷಣವನ್ನು ಪಡೆದರು.SSLC ಪೂರ್ಣಗೊಳಿಸಲು 3 ವರ್ಷ ತೆಗೆದುಕೊಂಡ ಇವರು ಶಿವಮೊಗ್ಗದಲ್ಲಿ ಇಂಟರ್ ಮೀಡಿಯಟ್ ಮುಗಿಸಿದರು.ಸಾಹಿತ್ಯ ಮತ್ತು ಸಮಾಜದ ಬಗ್ಗೆ ಒಲವಿದ್ದ ಇವರಿಗೆ ಗಣಿತ ಹಿಡಿಸಿದ್ದು ಅಷ್ಟಕ್ಕಷ್ಟೆ.ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್ ಹಾಗೂ ಎಂ.ಎ.ಪದವಿ ಪಡೆದರು.ಸ್ವಲ್ಪ ಕಾಲ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೂ ಅದಕ್ಕೆ ವಿದಾಯ ಹೇಳಿ 70 ರ ದಶಕದಲ್ಲಿ ಮಲೆನಾಡಿನ ತೊಟ್ಟಿಲಾದ ಮೂಡಿಗೆರೆಗೆ ಆಗಮಿಸಿ ,ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.

ಕುವೆಂಪು ಅವರ ಮಗನಾಗಿ ಹುಟ್ಟಿ,ಅವರ ವೈಚಾರಿಕತೆಯನ್ನು ಮೈಗುಡಿಸಿಕೊಂಡೇ ಬೆಳೆದ ಅವರು ಮುಂದೆ ತಮ್ಮದೇ ಆದ ಹಾದಿಯಲ್ಲಿ ನಡೆದರು.ಹೊಸಗನ್ನಡ ಸಾಹಿತ್ಯದ ಎರಡನೇ ತಲೆಮಾರಿನ ಲೇಖಕರಲ್ಲಿ ಮೊದಲ ಸಾಲಿನಲ್ಲಿ ಇರುವವರು ಪೂಚಂತೇ.ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ಶಿವರಾಮ ಕಾರಂತರ ನಂತರ ಅಂಥ ವೈವಿಧ್ಯಮಯ ಸಾಹಿತ್ಯ ಸೃಷ್ಟಿ ಆಗಿದ್ದರೆ ಅದು ತೇಜಸ್ವಿಯವರಿಂದಲೇ.ಅವರು ಕಥೆಗಾರ,ಕವಿ,ಅನುವಾದಕ,ಕಾದಂಬರಿಕಾರ,ಪರಿಸರ,ಚಿಂತಕ,ಸಮಾಜಶಾಸ್ತ್ರಜ್ಞ,ಅತ್ಯುತ್ತಮ ಛಾಯಾಗ್ರಾಹಕ,ಚಿತ್ರಕಲಾವಿದ,ಅಷ್ಟು ಸಾಲದೆಂಬಂತೆ ಕೃಷಿಕ.ಅವರು ಬರೆದ ಕರ್ವಾಲೋ,ನಿಗೂಢ ಮನುಷ್ಯರು,ಕಿರಗೂರಿನ ಗಯ್ಯಾಳಿಗಳು,ತಬರನ ಕಥೆ,ಜುಗಾರಿ ಕ್ರಾಸ್,ಅಬಚೂರಿನ ಪೋಸ್ಟಾಫೀಸು,ಕುಬಿ ಮತ್ತು ಇಯಾಲ,ಕೃಷ್ಣೇಗೌಡನ ಆನೆ ಮುಂತಾಗಿ ಪ್ರತಿಯೊಂದೂ ಕನ್ನಡ ಸಾಹಿತ್ಯದ ಗಡಿಗಳನ್ನು ವಿಸ್ತರಿಸುವ ತತ್ವವನ್ನು ಹೊಂದಿವೆ.

ಸಾಹಿತ್ಯ ಕ್ಷೇತ್ರದಲ್ಲಿ ನವ್ಯದ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸದ್ದ ತೇಜಸ್ವಿ 70 ರ ದಶಕದಲ್ಲಿ ವಾಸ್ತವತೆಯ ತುಡಿತ ಅರ್ಥ ಮಾಡಿಕೊಂಡು ನವ್ಯದಿಂದ ಹೊರಗೆ ಕಳಚಿಕೊಂಡರು. ಪರಿಸರ,ವೈಚಾರಿಕ ದೃಷ್ಟಿಯನ್ನು ತನ್ನಲ್ಲಿ ಜಾಗೃತಗೊಳಿಸಿ ಅದೇ ಹಾದಿಯಲ್ಲಿ ಸಾಹಿತ್ಯ ಕೃಷಿಯನ್ನು ಸಮೃದ್ಧಗೊಳಿಸಿದರು.ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಶಿವರಾಮ ಕಾರಂತರ ಕ್ರಿಯಾಶೀಲತೆ,ಕುವೆಂಪುರವರ ಪೂರ್ಣದೃಷ್ಟಿ,ಲೋಹಿಯಾರ ಸಮಾಜವಾದಿ ತತ್ವ ಇವರ ಮೇಲೆ ಪ್ರಭಾವ ಬೀರಿದ ಅಂಶಗಳು.ಇದನ್ನು ಸ್ವತಃ ತೇಜಸ್ವಿಯವರೇ ಹೇಳಿಕೊಂಡಿದ್ದರು.
ಲಿಂಗ ಬಂದ ಕಥೆಯ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಇವರು ಈವರೆಗೆ ೩೪ ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.ಮಾಯಾಲೋಕ-೧ ಇವರ ಅಂತಿಮ ಕೃತಿ.ಮಾಯಾಲೋಕ-೨ ನೇ ಭಾಗವನ್ನು ಯಾವಾಗ ಬರೆಯುತ್ತೀರಾ ಎಂದು ಕೇಳಿದಾಗ ಮೂಡು ಬಂದಾಗ ಎಂದು ಉತ್ತರಿಸಿದ್ದರಂತೆ.ಕನ್ನಡ ಮತ್ತು ENGLISH ಭಾಷೆಯ ಮೇಲೆ ಸಮಾನ ಪ್ರಭುತ್ವ ಹೊಂದಿದ್ದರು.ತೇಜಸ್ವಿಯವರು ಆಪ್ತವಾಗಿ ಬರೆಯುತ್ತಾರೆ ಎಂದರೆ ಅದಕ್ಕೆ ಕಾರಣ ಅವರು ಬದುಕಿದ ರೀತಿಯಲ್ಲಿಯೇ ಬರೆದವರು.ವಾಸ್ತವಿಕ ಸಂವೇದನೆ ತೇಜಸ್ವಿಯವರ ಬರವಣಿಗೆಯ ಸ್ಥಾಯೀಭಾವ.ಪೂಚಂತೇಯವರೇ ಹೇಳುವಂತೆ ಅವರ ಸಮಕಾಲೀನರಲ್ಲಿ ಅವರಿಗೆ ಇಷ್ಟವಾದವರು ಪಿ.ಲಂಕೇಶ್ ಹಾಗೂ ತೇಜಸ್ವಿ ಎಂದು ಕರೆದ ಯು.ಆರ್.ಅನಂತಮೂರ್ತಿಯವರು.

* ವಿಶೇಷ ಮಾಹಿತಿ *
೧.ಇವರು ಅಂತರ್ಜಾತಿ ವಿವಾಹವಾಗಿ (ರಾಜೇಶ್ವರಿ) ಕುವೆಂಪುರವರ ಮಂತ್ರ ಮಾಂಗಲ್ಯಕ್ಕೆ ಒತ್ತು ನೀಡಿದರು.
೨.ಪಂಪ ಪ್ರಶಸ್ತಿ ಬಂದಾಗ ಅದನ್ನು ನಯವಾಗಿ ನಿರಾಕರಿಸಿದ್ದರು.
೩.ತೇಜಸ್ವಿಯವರ ಅಂತ್ಯಸಂಸ್ಕಾರ ತೇಜಸ್ವಿಯವರ ತಂದೆ ಕುವೆಂಪುರವರ ಕಾವ್ಯಕ್ಕೆ ಸ್ಪೂರ್ತಿಯ ತಾಣ ಕವಿಶೈಲದಲ್ಲಿ ನಡೆಯಿತು.

ನಿಜವಾಗಿ ತೇಜಸ್ವಿಯವರ ಬಗ್ಗೆ ಬರೆಯಲು ಎಷ್ಟು ಪುಟಗಳಾದರೂ ಸಾಲದು.ಈ ಮೂಲಕ ಅವರ ಬಗ್ಗೆ ಕೆಲವು ಮಾಹಿತಿಯನ್ನು ಕಲೆಹಾಕಲು ಪ್ರಯತ್ನಿಸಿದ್ದೇನೆ.ನಿಮ್ಮ ಅಭಿಪ್ರಾಯಗಳಿಗಾಗಿ ಸದಾ ಹಾತೊರೆಯುವ MBM.

Blogs I Follow